logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ಬದುಕಲು ಕಲಿಸುವ ಎನ್‌ಎಸ್‌ಎಸ್ ಎಂಬ ಗರಡಿಮನೆ
Published By: ಅಶೋಕ ಗುಂಡಿನಮನಿ.ನಿಡಗುಂದಿ ತಾಲೂಕ ರಿಪೋರ್ಟರ್
Last Updated Date:  24-Jun-2023
ಕಲಾಸುದ್ದಿ

ನಿಡಗುಂದಿ -: ಜೂ- 24 :- ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ಗ್ರಾಮೀಣ ವಿದ್ಯಾವರ್ಧಕ ಸಂಘದ ಶ್ರೀ ಎಂ ವಿ ನಾಗಠಾಣ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ನಿಡಗುಂದಿ ಹಾಗೂ ಸರ್ಕಾರಿ ಪ್ರೌಢಶಾಲೆ ಕಮದಾಳ ಇವರ ಸಂಯೋಗದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ನಾಲ್ಕನೇ ದಿನದ ಶ್ರಮದಾನ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಮತ್ತು ಸ್ವಯಂ ಪ್ರೇರಿತರಾಗಿ ಶಿಬಿರಾರ್ಥಿಗಳು ಶ್ರಮದಾನ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು ಮತ್ತು ಈ ಸೇವಾ ಯೋಜನೆ ಕಾರ್ಯಕ್ರಮದ ವಿಶೇಷತೆಯು ವೈವಿಧ್ಯಮಯವಾಗಿ ಕಂಡು ಬಂದಿದೆ ಅಲ್ಲಿನ ವೇದಿಕೆ, ಊಟೋಪಚಾರ, ಅಲಂಕಾರ, ಸ್ವಚ್ಛತೆ ಹೀಗೆ ಹಲವಾರು ಸಮಿತಿಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿದವರು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು. ಇದು ಒಂದು ಉದಾಹರಣೆಯಷ್ಟೆ, ಇಂತಹ ನೂರಾರು ಕಾರ್ಯಕ್ರಮಗಳಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರ ಪರಿಶ್ರಮವಿರುತ್ತದೆ. ಅಷ್ಟರ ಮಟ್ಟಿಗೆ ಇದು ವಿದ್ಯಾರ್ಥಿಗಳ ಬದುಕನ್ನು ರೂಪಿಸಿರುತ್ತದೆ. ಈ ವಿಚಾರವನ್ನು ನೆನಪಿಸಲು ಇದು ಒಳ್ಳೆಯ ಸಂದರ್ಭವೆನಿಸುತ್ತದೆ. ಏಕೆಂದರೆ, ’ಸೇವೆಯ ಸವಿಜೇನ ಸವಿಯೋಣ ಬನ್ನಿ, ಸೇವೆಯ ಸವಿಜೇನ ಹಂಚೋಣ ಬನ್ನಿ’ ಎನ್ನುತ್ತಲೇ ಇಂದು ರಾಷ್ಟ್ರದಾದ್ಯಂತ ಯುವಜನತೆಯಲ್ಲಿ ಸೇವಾ ಮನೋಭಾವವನ್ನು ಬಿತ್ತುವಲ್ಲಿ ಯಶಸ್ವಿಯಾಗಿರುವ ರಾಷ್ಟ್ರೀಯ ಸೇವಾ ಯೋಜನೆಗೆ ನಲವತ್ತೈದರ ಸಂಭ್ರಮ. ಭಾರತವನ್ನು ರಾಮರಾಜ್ಯವನ್ನಾಗಿಸಲು ಯುವಪಡೆಯೊಂದು ಸಿದ್ಧಗೊಳ್ಳಬೇಕೆಂದು ಮಹಾತ್ಮಾ ಗಾಂಧೀಜಿಯವರು ಕಂಡಿದ್ದ ಕನಸನ್ನು ನನಸಾಗಿಸಲು ಯುವಜನತೆಯಲ್ಲಿ ಅದರಲ್ಲೂ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ನಾಯಕತ್ವಗುಣ, ಸಾಮಾಜಿಕ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಸರಕಾರವು ಸಿಯಾವುದ್ದೀನ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುತ್ತದೆ. ಈ ಸಮಿತಿಯ ಶಿಪಾರಸ್ಸಿನೊಂದಿಗೆ ಗಾಂಧೀಜಿಯವರ ಜನ್ಮಶತಮಾನೋತ್ಸವದ ಸವಿನೆನಪಿಗಾಗಿ 1969ರಲ್ಲಿ ಈ ರಾಷ್ಟ್ರೀಯ ಸೇವಾ ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಲಾಗುತ್ತದೆ. ಅಂದಿನಿಂದ ಭಾರತದಾದ್ಯಂತ ಸೆಪ್ಟೆಂಬರ್ 24ನ್ನು ರಾಷ್ಟೀಯ ಸೇವಾ ಯೋಜನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಆರಂಭದಲ್ಲಿ ಕೆಲವೇ ಕೆಲವು ಕಾಲೇಜುಗಳಲ್ಲಿ ಅತ್ಯಲ್ಪ ಸ್ವಯಂ ಸೇವಕರನ್ನು ಒಳಗೊಂಡಿದ್ದ ಎನ್.ಎಸ್.ಎಸ್. ಇಂದು ರಾಷ್ಟಾದ್ಯಂತ ಮೂವತ್ತು ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳ್ನು ಒಳಗೊಂಡು ವಿಶ್ವದಲ್ಲಿಯೇ ಸೇವಾ ವಲಯದಲ್ಲಿ ಅತೀ ಹೆಚ್ಚು ಸದಸ್ಯರನ್ನೊಳಗೊಂಡ ವಿದ್ಯಾರ್ಥಿ ಸಂಘಟನೆಯಾಗಿದೆ. ಪದವಿಪೂರ್ವ ವಿಭಾಗದಿಂದ ಸ್ನಾತಕೋತ್ತರ ಹಂತದವರೆಗಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವ ಎನ್.ಎಸ್.ಎಸ್. ವಿದ್ಯಾರ್ಥಿಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಎಲೆಮರೆಯ ಕಾಯಿಯಂತೆ ಕಾರ್ಯನಿವಹಿಸಿಕೊಂಡು ಬಂದಿದೆ. ತಾವು ವಾಸಿಸುವ ಸಮಾಜ ಅಥವಾ ಸಮುದಾಯದ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸುವುದು, ಸಮಾಜದ ಅಗತ್ಯಗಳನ್ನು ಗುರುತಿಸಿ ಈ ಬಗ್ಗೆ ತಾವು ಏನು ಮಾಡಬಹುದೆಂದು ಆಲೋಚಿಸಿ ಸಾಮಾಜಿಕ ಹಾಗೂ ಪೌರ ಕರ್ತವ್ಯಗಳನ್ನು ಅರ್ಥಮಾಡಿಕೊಂಡು ಅದರಂತೆ ನಡೆದುಕೊಳ್ಳಲು ಪ್ರಯತ್ನಿಸುವುದು, ಅಕ್ಷರಸ್ಥ ಮತ್ತು ಅನಕ್ಷರಸ್ಥರ ನಡುವಿನ ಅಂತರವನ್ನು ಕಡಿಮೆಗೊಳಿಸಲು ಯತ್ನಿಸುವುದು, ಕಲಿತ ವಿದ್ಯೆಯ ಫಲವನ್ನು ಪ್ರಚಲಿತ ಸಮಸ್ಯೆಗಳ ಪರಿಹಾರಕ್ಕೆ ಹೇಗೆ ಬಳಸಿಕೊಳ್ಳಬಹುದೆಂಬ ಅರಿವನ್ನು ಮೂಡಿಸುವುದು, ಪ್ರಕೃತಿ ವಿಕೋಪ, ಬೆಂಕಿ ಅನಾಹುತ ಮೊದಲಾದ ಸಂದರ್ಭಗಳಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಹೊಂದುವಂತೆ ಮಾಡುವುದು. ಮುಖ್ಯವಾಗಿ ಸಾಮಾಜಿಕ ಕುಂದುಕೊರತೆಗಳನ್ನು ತಮ್ಮ ಮಟ್ಟದಲ್ಲಿ ಪರಿಹರಿಸಿಕೊಳ್ಳಲು ಸ್ವತಃ ಕಾರ್ಯಪ್ರವೃತ್ತರಾಗುವಂತೆ ಮಾಡುವುದು. ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಧ್ಯೇಯವಾಗಿದೆ. ನಿರಂತರವಾಗಿ ಒಂದಿಲ್ಲೊಂದು ವಿಚಾರಕ್ಕೆ ಸಂಬಂಧಿಸಿದ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿ ಹಾಗೂ ವ್ಯಕ್ಕಿತ್ವ ರೂಪಿಸಲು ಸಹಕಾರಿಯಾಗಿದೆ. ಕಲಿಕಾ ಸಮಯದಲ್ಲಿ ವಿದ್ಯಾರ್ಥಿಯು ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಕೊಂಡು ಅಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಆತನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎನ್ನುವುದಕ್ಕೆ ಜೀವಂತ ನಿದರ್ಶನವೇ ಎನ್.ಎಸ್.ಎಸ್. ’ನನಗಲ್ಲ ನಿನಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ’ಸೇವೆಯ ಮೂಲಕ ಶಿಕ್ಷಣ – ಶಿಕ್ಷಣದ ಮೂಲಕ ಸೇವೆ’ ಎಂಬ ಮೂಲಮಂತ್ರವನ್ನು ಎನ್.ಎಸ್.ಎಸ್. ಹೊಂದಿದೆ. ನಮ್ಮ ಬದುಕಿಗೆ ಅಗತ್ಯವಾಗಿ ಬೇಕಿರುವ ಸಹಕಾರ, ಸೌಹಾರ್ದತೆ, ಭಾವೈಕ್ಯತೆಯನ್ನು ನಮ್ಮಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುತ್ತದೆ. ಎನ್.ಎಸ್.ಎಸ್ ಎನ್ನುವುದೊಂದು ಜೀವನ ಆದರ್ಶವಾಗಿದೆ ಎಂದರೆ ತಪ್ಪಾಗಲಾರದು. ಕಾಲೇಜಿನಲ್ಲಿ ಮಾತ್ರವಲ್ಲದೆ ಸಮಾಜದಲ್ಲೂ ಸಹಕಾರ, ಸೌಹಾರ್ದತೆಯನ್ನು ಉಳಿಸಿ ಬೆಳೆಸಿದಲ್ಲಿ ದೇಶ ಆಭಿವೃದ್ಧಿ ಪಥದತ್ತ ಸಾಗುವಲ್ಲಿ ಎರಡು ಮಾತಿಲ್ಲ. ಇವತ್ತಿನ ದಿನಗಳಲ್ಲಿ ಅಂಕಗಳ ವಿಚಾರದಲ್ಲಿ ವಿದ್ಯಾರ್ಥಿಗಳಿಗಿಂತ ಪೋಷಕರೇ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದನ್ನು ಗಮನಿಸಬಹುದು. ಉತ್ತಮ ಅಂಕಗಳು ಬರಬೇಕು ಎನ್ನುವುದು ನಿಜ. ಆದರೆ ಅಂಕಗಳೇ ಸರ್ವಸ್ವ ಎನ್ನುವ ನಡೆ ಸರಿಯಲ್ಲ. ತರಗತಿಯ ಪಾಠಗಳು ವಿದ್ಯಾರ್ಥಿಗಳನ್ನು ರೂಪಿಸುವ ಬಗೆ ಒಂದಾದರೆ, ಎನ್‌ಎಸ್‌ಎಸ್‌ನಂತಹ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ರೂಪಿಸುವ ವಿಧಾನವೇ ಬೇರೆ. ರಾ.ಸೇ.ಯೋಜನೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಉಳಿದ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿರುತ್ತಾರೆ. ತರಗತಿಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳುವ ರೀತಿಯು ಕೂಡ ಭಿನ್ನವಾಗಿರುತ್ತದೆ. ಎನ್.ಎಸ್.ಎಸ್. ಎಂಬುದು ಒಂದು ಬಯಲು ವಿಶ್ವವಿದ್ಯಾಲಯ. ಇಲ್ಲಿ ಪುಸ್ತಕ ಜ್ಞಾನದ ಜೊತೆಗೆ ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ. ಸ್ವಯಂ ಸೇವಕರು ಪ್ರತಿಫಲವಿಲ್ಲದೆ ಮಾಡುವ ಸೇವೆ ಆತ್ಮಸ್ಥೈರ‍್ಯವನ್ನು ಹೆಚ್ಚಿಸುತ್ತದೆ. ಇತ್ತೀಚಿಗೆ ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿರುವದನ್ನು ಗಮನಿಸಬಹುದು. ಎನ್.ಎಸ್.ಎಸ್.ಗೆ ಸೇರುವುದರಿಂದಾಗುವ ಇನ್ನೊಂದು ಪ್ರಯೋಜನವೆಂದರೆ ಇಲ್ಲಿ ವಿದ್ಯಾರ್ಥಿಯು ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ಬ್ಯುಜಿಯಾಗಿರುವುದರಿಂದ ಯಾವುದೇ ಕಾರಣಕ್ಕೂ ದುಶ್ಚಟಗಳ ದಾಸನಾಗಲು ಸಾಧ್ಯವಿಲ್ಲ. ಎನ್‌ಎಸ್‌ಎಸ್ ಅದೆಷ್ಟೋ ಮಾದರಿ ಯೋಜನೆಗಳನ್ನು ಆರಂಭದ ದಿನಗಳಲ್ಲಿಯೇ ಹಾಕಿಕೊಂಡಿದೆ. ಉದಾಹರಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ ಚಾಲನೆ ನೀಡಿದ ಸ್ವಚ್ಛ ಭಾರತ್ ಅಭಿಯಾನದ ಕಲ್ಪನೆ ಎನ್‌ಎಸ್‌ಎಸ್‌ನ ಮೂಲ ಉದ್ದೇಶಗಳಲ್ಲಿ ಒಂದು ಎಂಬಂತೆ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಸ್ವಯಂಸೇವಕರ ನೆರವಿನೊಂದಿಗೆ ರಾ.ಸೇಯೋ. ಘಟಕಗಳು ವರ್ಷವಿಡೀ ಅನೇಕ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ರಾ. ಸೇ. ಯೋಜನೆ ಸ್ವಯಂಸೇವಕರ ಜೀವನವನ್ನೇ ಬದಲಿಸಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಸ್ವಯಂ ಸೇವಕರಾಗಿದ್ದಾಗ ಇಷ್ಟಪಟ್ಟು ಇನ್ನು ಕೆಲವರು ಕಷ್ಟ ಪಟ್ಟು ಮಾಡಿದ ಶ್ರಮಾದಾನ, ಕಾರ‍್ಯಕ್ರಮಗಳ ಆಯೋಜನೆ, ಯೋಜನಾಧಿಕಾರಿಗಳ ಮಾರ್ಗದರ್ಶನ ಎಲ್ಲವೂ ಇಂದು ನಮ್ಮನ್ನು ಒಬ್ಬ ಉತ್ತಮ ನಾಗರೀಕನನ್ನಾಗಿ ಮಾಡಿದೆ. ವಿದ್ಯಾರ್ಥಿ ಜೀವನವೆಂದರೆ ಓದು, ಪಾಠ, ಪ್ರವಚನ, ಪರೀಕ್ಷೆ ಮಾತ್ರವಲ್ಲ ಬದಲಿಗೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಾಗಬೇಕು. ಈ ಕೆಲಸ ಕಾಲೇಜುಗಳಲ್ಲಿ ಎನ್. ಎಸ್. ಎಸ್ ಘಟಕದಿಂದ ಸಾಧ್ಯವಾಗುತ್ತಿದೆ. ನಾವು ನಮ್ಮ ವಿದ್ಯಾರ್ಥಿ ಜೀವನದಲ್ಲಿ ಬೇರೆ ಬೇರೆ ಮನೋಭಾವದವರನ್ನು ಕಂಡಿರುತ್ತೇವೆ. ಕೆಲವರು ಪಾಠ, ಪರೀಕ್ಷೆ, ಅಂಕಗಳನ್ನು ಪಡೆಯುವುದರಲ್ಲೇ ಮಗ್ನರಾಗಿರುತ್ತಾರೆ. ಮತ್ತೆ ಕೆಲವರು ವಿದ್ಯಾರ್ಥಿದೆಸೆಯಲ್ಲಿ ಇತರ ಚಟುವಟಿಕೆಗಳಲ್ಲೂ ಭಾಗಿಯಾಗಿ ವಿದ್ಯಾರ್ಥಿ ಜೀವನವನ್ನು ಸಾರ್ಥಕ ಗೋಳಿಸುತ್ತಾರೆ. ಕೇವಲ ಪಾಠ, ಪ್ರವಚಗಳಿಂದ ಜೀವನದಲ್ಲಿ ಯಶಸ್ಸು ಸಿಗಬಹುದೇ ಹೊರತು ಆನಂದವಲ್ಲ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಿಯಮಾನುಸಾರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಮಾತ್ರ ’ಸ್ಟುಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್’ ಆಗಲು ಸಾಧ್ಯ. ಒಂದು ಬಾರಿ ರಾ.ಸೇ.ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆಂದರೆ, ಅಲ್ಲಿಂದ ಹೊರಬರುವುದೇ ಇಲ್ಲ. ಅಧಿಕೃತವಾಗಿ ಎನ್.ಎಸ್.ಎಸ್.ನ್ನು ಬಿಟ್ಟರೂ ಕೂಡಾ ಒಂದಲ್ಲಾ ಒಂದು ರೀತಿಯಲ್ಲಿ ಅವರು ಎನ್.ಎಸ್.ಎಸ್.ನೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿರುತ್ತಾರೆ. ಏಕೆಂದರೆ, ಎನ್.ಎಸ್.ಎಸ್. ಅಂತಹ ಭಾಂದವ್ಯದ ಗಂಟನ್ನು ಬಿಗಿದುಬಿಡುತ್ತದೆ. ಒಂದು ಬಾರಿ ಪ್ರವೇಶ ಪಡೆದು ಎರಡು ವರ್ಷಗಳ ಕಾಲ ತಮ್ಮನ್ನು ತೊಡಗಿಸಿಕೊಂಡರೆ 240 ಗಂಟೆಗಳಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ವಿವಿಧ ರೀತಿಯ ಮಾಹಿತಿ ಶಿಬಿರ, ರಸ್ತೆ ಸುರಕ್ಷತೆ, ಸ್ವಚ್ಛತೆ, ನಾಗರಿಕ ಪ್ರಜ್ಞೆಯ ಅರಿವು, ದತ್ತುಗ್ರಾಮ ಸ್ವೀಕಾರ, ಸ್ಥಳೀಯ ಶಾಲಾ ಕಾಲೇಜು, ದೇವಾಲಯಗಳ ಕಾರ‍್ಯಕ್ರಮಗಳಲ್ಲಿ ಭಾಗವಹಿಸುವಿಕೆ ಹೀಗೆ ಒಂದಲ್ಲ ಒಂದು ರಿತಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರಭುದ್ಧರಾಗುತ್ತಾರೆ. ಇನ್ನು ಎನ್.ಎಸ್.ಎಸ್. ನಲ್ಲಿ ವಾರ್ಷಿಕ ವಿಶೇಷ ಶಿಬಿರದ ಗೌಜಿ ಗಮ್ಮತ್ತೇ ಬೇರೆ, ಈ ಹಿಂದೆ ಹತ್ತು ದಿನಗಳ ವರೆಗೆ ನಡೆಯುತ್ತಿದ್ದ ಶಿಬಿರವನ್ನು ಕಾರಣಾಂತರಗಳಿಂದ ಇಂದು ಏಳು ದಿನಗಳ ಕಾಲ ನಡೆಸಲಾಗುತ್ತಿದೆ. ಯಾವುದಾದರೂ ಒಂದು ಹಳ್ಳಿಯ ಸರ್ಕಾರಿ ಶಾಲೆಯನ್ನು ಕೇಂದ್ರವನ್ನಾಗಿಟ್ಟುಕೊಂಡು, ಅಲ್ಲಿನ ಪರಿಸರದ ಸ್ವಚ್ಛತೆ, ಕೈತೋಟ ನಿರ್ಮಾಣ, ಆಟದ ಮೈದಾನದ ವಿಸ್ತರಣೆ, ಅಲ್ಲದೇ ಊರಿನ ಜನರಿಗೆ ಉಚಿತ ಮಾಹಿತಿ ಶಿಬಿರಗಳು, ಶಾಲಾ ಮಕ್ಕಳಿಗೆ ಕಾರ‍್ಯಕ್ರಮಗಳು ಆರೋಗ್ಯ ಶಿಬಿರ, ಅಗ್ನಿಶಮನ, ಉರಗ ಪ್ರದರ್ಶನ ಮುಂತಾದ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಒಂದು ದಿನ ಊರಿನ ಮನೆ ಮನೆಗೆ ತೆರಳಿ, ಅಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಅಧ್ಯಯನ ಮಾಡಿ ಆ ವರದಿಯನ್ನು ಸರಕಾರಕ್ಕೆ ಒಪ್ಪಿಸುವ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆಯಲಾಗುತ್ತದೆ ಶಿಬಿರದ ಮೇಲ್ವಿಚಾರಣೆಗೆ ಯೋಜನಾಧಿಕಾರಿಗಳು ಇರುತ್ತಾರಾದರೂ ಅಡುಗೆ ತಯಾರಿ ಲೆಕ್ಕಪತ್ರ ನಿರ್ವಹಣೆ, ಕಾರ‍್ಯಕ್ರಮಗಳ ಆಯೋಜನೆ ಎಲ್ಲವೂ ವಿದ್ಯಾರ್ಥಿಗಳಿಂದಲೇ ಅರ್ಧಾತ್ ಸ್ವಯಂಸೇವಕ/ಸೇವಕಿಯರಿಂದಲೇ ನಡೆಯುತ್ತದೆ. ಸೇವೆಯನ್ನೇ ಆಧಾರವನ್ನಾಗಿಸಿಕೊಂಡಿರುವ ಎನ್.ಎಸ್.ಎಸ್.ನ ಧ್ಯೇಯ ವಾಕ್ಯವೇ ಹಾಗೆ ’ನನಗಲ್ಲ ನಿನಗೆ’. ಎನ್‌ಎಸ್‌ಎಸ್‌ನ ಏಕದಿನ ಶಿಬಿರಗಳು ಸ್ವಯಂಸೇವಕರಲ್ಲಿ ಪ್ರಾರಂಭದಲ್ಲಿದ್ದ ಆತಂಕ, ಭಯವನ್ನು ದೂರ ಮಾಡಿದರೆ, ವಾರ್ಷಿಕ ವಿಶೇಷ ಶಿಬಿರಗಳು ಸ್ವಯಂಸೇವಕರಲ್ಲಿ ಹೊಂದಾಣಿಕೆ, ಸಹಬಾಳ್ವೆ, ಒಗ್ಗಟ್ಟು, ಕಾರ‍್ಯಕ್ರಮ ನಿರ್ವಹಣೆ, ಸಹಕಾರ, ಸೇವಾಮನೋಭಾವ ಕಲಿಸುವ ಜೊತೆಗೆ ನಮ್ಮಲ್ಲಿ ಸೃಜನಶೀಲತೆಯನ್ನು ಹುಟ್ಟುಹಾಕುತ್ತವ. ಅವಿಭಜಿತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಯುವಜನತೆಗೆ ಸಹಜೀವನದ, ಕೂಡುಕುಟುಂಬದ ಕಲ್ಪನೆಯೇ ಇಲ್ಲವಾಗಿದೆ. ರಾ. ಸೇ. ಯೋಜನಾ ಶಿಬಿರವು ವಸುದೈವಕುಟುಂಬಕಮ್ ಎಂಬ ಭಾರತೀಯ ತತ್ವವನ್ನು ಪ್ರಯೋಗಿಕವಾಗಿ ತೋರಿಸುತ್ತದೆ. ಶಿಬಿರದಲ್ಲಿ ಮುಂಜಾನೆಯಿಂದ ರಾತ್ರಿಯವರೆಗೆ ಮಾಡುವ ಎಲ್ಲಾ ಕೆಲಸಕಾರ‍್ಯಗಳು ಸಬಲ ಯುವಕರನ್ನು ನಿರ್ಮಿಸುವಲ್ಲಿ ಹಾಗೂ ಸ್ವಯಂಸೇವಕರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುತ್ತದೆ. ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುವ ಎನ್.ಎಸ್.ಎಸ್. ಎಲೆ ಮರೆಯ ಕಾಯಿಯನ್ನು ಬೆಳಕಿಗೆ ತರುವ ಕೆಲಸ ವಾರ್ಷಿಕ ಶಿಬಿರದಲ್ಲಿ ನಡೆಯುತ್ತದೆ.ಈ ಒಂದು ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂಯೋಜನಾಧಿಕಾರಿಗಳು ಮತ್ತು ಶಿಬಿರಾರ್ಥಿಗಳು ಸಂತಸದಿಂದ ಶ್ರಮದಾನ ಕಾರ್ಯಕ್ರಮದಲ್ಲಿ ತೊಡಗಿರುವ ದೃಶ್ಯ ಕಂಡುಬಂದಿದೆ .


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img